ಮಾಹಿತಿ ಇರುವಲ್ಲಿ ಹೋಗಲು

ಸುಖೀ ಸಂಸಾರಕ್ಕೆ ಸಲಹೆಗಳು | ಮಕ್ಕಳ ಪಾಲನೆ

ಹದಿವಯಸ್ಸಿನ ಮಕ್ಕಳು ನಂಬಿಕೆ ಕಳಕೊಳ್ಳೋ ಹಾಗೆ ನಡಕೊಂಡರೆ ಏನು ಮಾಡೋದು?

ಹದಿವಯಸ್ಸಿನ ಮಕ್ಕಳು ನಂಬಿಕೆ ಕಳಕೊಳ್ಳೋ ಹಾಗೆ ನಡಕೊಂಡರೆ ಏನು ಮಾಡೋದು?

 ಕೆಲವು ಮಕ್ಕಳು ಮುಲಾಜಿಲ್ಲದೆ ಮನೆಗೆ ಲೇಟಾಗಿ ಬರ್ತಾರೆ. ಇನ್ನೂ ಕೆಲವ್ರು ಫ್ರೆಂಡ್ಸ್‌ ಜೊತೆ ಅಪ್ಪ ಅಮ್ಮಗೆ ಗೊತ್ತಿಲ್ಲದೆ ಆಚೆ ಹೋಗ್ತಾರೆ. ಈ ತರ ಸುಳ್ಳು ಹೇಳಿ ಅವ್ರಿಗೆ ಮೋಸ ಮಾಡ್ತಾರೆ. ಹೀಗೆ ನಿಮ್ಮ ಮಕ್ಕಳು ನಿಮ್ಮ ನಂಬಿಕೆನ ಕಳಕೊಳ್ಳೋ ತರ ನಡಕೊಂಡಾಗ ಏನ್ಮಾಡ್ತೀರ?

 ದಂಗೆಯೇಳೋ ಗುಣ ನಮ್ಮ ಮಕ್ಕಳಲ್ಲಿ ಇದೆಯಾ?

 ಇರ್ಲೇಬೇಕು ಅಂತೇನಿಲ್ಲ, ಆದ್ರೆ “ಮೂರ್ಖತನವು ಹುಡುಗನ ಮನಸ್ಸಿಗೆ ಸಹಜ” ಅಂತ ಬೈಬಲ್‌ ಹೇಳುತ್ತೆ. ಮಕ್ಕಳು ಈ ಮಾತು ನಿಜ ಅಂತ ತಮ್ಮ ನಡವಳಿಕೆಯಲ್ಲಿ ತೋರಿಸ್ತಾರೆ. (ಜ್ಞಾನೋಕ್ತಿ 22:15) ಲಾರೆನ್ಸ್‌ ಸ್ಟೇನ್ಬರ್ಗ್‌ ಅನ್ನೋರು ತಮ್ಮ ಪುಸ್ತಕದಲ್ಲಿ “ತಪ್ಪುಗಳಾಗೋದು ಸಹಜ” ಅನ್ನೋ ಅಂಶದ ಕೆಳಗೆ “ಹದಿಪ್ರಾಯದಲ್ಲಿ ಮಕ್ಕಳು ಆತುರಪಟ್ಟು ಕೆಲವು ಮೂರ್ಖತನದ ನಿರ್ಧಾರಗಳನ್ನ ಮಾಡಿಬಿಡ್ತಾರೆ” ಅಂತ ಹೇಳಿದ್ದಾರೆ. a

 ಮಕ್ಕಳು ನಮ್ಗೆ ಮೋಸಮಾಡ್ತಿದ್ರೆ?

 ನಿಮ್ಮ ಮಕ್ಕಳು ನಿಮ್ಮ ಮಾತನ್ನ ಕೇಳೋದೇ ಇಲ್ಲ ಅಂತ ನಿರ್ಧಾರ ಮಾಡಬೇಡಿ. ಅಪ್ಪ ಅಮ್ಮ ತಮ್ಮ ಬಗ್ಗೆ ಏನು ಅನ್ಕೊತಾರೆ ಅನ್ನೊದ್ರ ಬಗ್ಗೆ ಹದಿಪ್ರಾಯದ ಮಕ್ಕಳು ಯೋಚ್ನೆ ಮಾಡ್ತಾರೆ, ಆದ್ರೆ ಅದನ್ನ ಆಚೆ ತೋರಿಸಲ್ಲ ಅಂತ ಸಂಶೋಧನೆಗಳು ತಿಳಿಸುತ್ತವೆ. ಆ ರೀತಿ ಅವ್ರು ತೋರಿಸಲ್ಲ ಅಂದ್ರೂ ಮನ್ಸಲ್ಲಿ ಅಪ್ಪ ಅಮ್ಮಗೆ ಬೇಜಾರು ಮಾಡಿಬಿಟ್ವಲ್ಲ ಅಂತ ನೊಂದುಕೊಳ್ತಾರೆ.

ಮುರಿದ ಮೂಳೆ ವಾಸಿ ಆದಾಗ ಅದಕ್ಕೆ ಮತ್ತೆ ಶಕ್ತಿ ಸಿಗುತ್ತೆ. ನಂಬಿಕೆ ವಿಷ್ಯದಲ್ಲೂ ಇದು ನಿಜ

 ಇದಕ್ಕೆ ಯಾರು ಕಾರಣ?

  •   ಅವ್ರ ಸಹವಾಸನಾ? ಬೈಬಲ್‌ “ದುಸ್ಸಹವಾಸಗಳು ಸದಾಚಾರಗಳನ್ನು ಕೆಡಿಸುತ್ತವೆ” ಅಂತ ಹೇಳುತ್ತೆ. (1 ಕೊರಿಂಥ 15:33) ಮಕ್ಕಳ ಮೇಲೆ ಅವ್ರ ಸ್ನೇಹಿತರು, ಸೋಶಿಯಲ್‌ ಮೀಡಿಯ ಮತ್ತು ಜಾಹೀರಾತುಗಳು ತುಂಬ ಪ್ರಭಾವ ಬೀರುತ್ತೆ. ಮಕ್ಕಳಿಗೆ ಅನುಭವ ಇಲ್ಲದಿರೋದ್ರಿಂದ ತಪ್ಪಾದ ನಿರ್ಧಾರಗಳನ್ನ ಮಾಡಿಬಿಡ್ತಾರೆ. ಆದ್ರೆ ತಪ್ಪು ನಿರ್ಧಾರಗಳಿಂದ ಆಗೋ ಪರಿಣಾಮಗಳನ್ನ ಎದುರಿಸೋಕೆ ಕಲಿತ್ರೆ ಮುಂದೆ ಅವ್ರು ಜವಾಬ್ದಾರಿ ಇರೋ ಮಕ್ಕಳಾಗ್ತಾರೆ.

  •   ನಮ್ಮ ತಪ್ಪಾ? ನಮ್ಮ ಮಕ್ಕಳು ದಂಗೆಯೇಳೋದಕ್ಕೆ ನಾವೇ ಕಾರಣ ಯಾಕಂದ್ರೆ ‘ನಾನು ತುಂಬ ಸ್ಟ್ರಿಕ್ಟ್‌ ಆಗಿದ್ದೆ ಅಥ್ವಾ ತುಂಬ ಮುದ್ದು ಮಾಡಿಬಿಟ್ಟೆ’ ಅಂತ ಕೆಲವು ಹೆತ್ತವರಿಗೆ ಅನಿಸಬಹುದು. ಹಾಗನಿಸಿದ್ರೆ ತಪ್ಪು ಯಾರದು ಅನ್ನೋದ್ರ ಬಗ್ಗೆ ತಲೆ ಕೆಡಿಸ್ಕೊಳ್ಳೊ ಬದಲು ಅದನ್ನ ಹೇಗೆ ಸರಿಮಾಡೋದು ಅಂತ ನೋಡಿ.

 ನಂಬಿಕೆನಾ ಕಟ್ಟೋಕೆ ಮತ್ತೆ ಮಕ್ಕಳಿಗೆ ಹೇಗೆ ಸಹಾಯ ಮಾಡಬಹುದು?

  •   ನಿಮ್ಮ ಮೇಲೆ ನಿಮ್ಗೆ ಹಿಡಿತ ಇರ್ಲಿ. ತಪ್ಪು ಮಾಡಿದ್ರೆ ಅಪ್ಪ ಅಮ್ಮಗೆ ಕೊಪ ಬಂದೇ ಬರುತ್ತೆ ಅಂತ ಮಕ್ಕಳಿಗೆ ಗೊತ್ತಿರುತ್ತೆ. ಹಾಗಾಗಿ ಸಮಾಧಾನವಾಗಿ ಅವ್ರ ಹತ್ರ ಮಾತಾಡಿ ತಪ್ಪಿಗೆ ಕಾರಣ ಏನಂತ ಕೇಳಿ. ಅವರು ಕುತೂಹಲದಿಂದ ಹೀಗೆ ಮಾಡಿದ್ರಾ? ಬೋರಾಗಿತ್ತಾ? ಒಂಟಿತನ ಕಾಡ್ತಿತ್ತಾ? ಸ್ನೇಹಿತರು ಬೇಜಾರು ಮಾಡ್ಕೊತಾರೆ ಅಂತ ಹಾಗೆ ಮಾಡಿದ್ರಾ? ಅಂತ ಕೇಳಿ. ಕಾರಣ ಏನೇ ಇದ್ರೂ ಅವರು ಮಾಡಿದ್ದು ತಪ್ಪೇ. ಆದ್ರೆ ಅದನ್ನ ತಿಳ್ಕೊಳ್ಳೋದ್ರಿಂದ ನಿಮ್ಮ ಮಕ್ಕಳ ಮನಸ್ಸಲ್ಲಿ ಏನಿದೆ ಅಂತ ಅರ್ಥ ಮಾಡ್ಕೊಬಹುದು. ಆಗ ಯಾಕೆ ಹೀಗಾಯ್ತು ಅಂತ ಇಬ್ರಿಗೂ ಅರ್ಥ ಆಗುತ್ತೆ.

     ಬೈಬಲ್‌ ತತ್ವ: “ಪ್ರತಿಯೊಬ್ಬನು ಕಿವಿಗೊಡುವುದರಲ್ಲಿ ಶೀಘ್ರನೂ ಮಾತಾಡುವುದರಲ್ಲಿ ದುಡುಕದವನೂ ಕೋಪಿಸುವುದರಲ್ಲಿ ನಿಧಾನಿಯೂ ಆಗಿರಬೇಕು.”—ಯಾಕೋಬ 1:19.

  •   ಮನಸ್ಸು ಬಿಚ್ಚಿ ಮಾತಾಡೋಕೆ ಮಕ್ಕಳಿಗೆ ಸಹಾಯ ಮಾಡಿ. ಮಾಡಿದ ತಪ್ಪಿಂದ ನಿನ್ಗೆ ಏನು ಗೊತ್ತಾಯ್ತು? ಮುಂದೆ ಇದೇ ಪರಿಸ್ಥಿತಿ ಬಂದ್ರೆ ಏನು ಮಾಡ್ತಿಯಾ? ಅಂತ ಮಕ್ಕಳನ್ನ ಕೇಳಿ. ಹೀಗೆ ಕೇಳೋದ್ರಿಂದ ಸರಿಯಾದ ನಿರ್ಧಾರ ಹೇಗೆ ಮಾಡೋದು ಅಂತ ಕಲ್ಸಿಕೊಡ್ತೀರ.

     ಬೈಬಲ್‌ ತತ್ವ: “ಪೂರ್ಣ ದೀರ್ಘ ಸಹನೆಯಿಂದಲೂ ಬೋಧಿಸುವ ಕಲೆಯಿಂದಲೂ ಖಂಡಿಸು, ಗದರಿಸು ಮತ್ತು ಬುದ್ಧಿಹೇಳು.”—2 ತಿಮೊತಿ 4:2.

  •   ತಪ್ಪು ಮಾಡಿದ್ರೆ ಶಿಕ್ಷೆ ಸಿಗುತ್ತೆ ಅಂತ ಹೇಳಿ. ಮಕ್ಕಳು ಏನು ತಪ್ಪು ಮಾಡ್ತಾರೋ ಅದಕ್ಕೆ ತಕ್ಕ ಶಿಕ್ಷೆ ಕೊಡಬೇಕು. ಹಾಗೆ ಮಾಡೋದ್ರಿಂದ ಅವ್ರ ಮೇಲೆ ಒಳ್ಳೇ ಪ್ರಭಾವ ಬೀರುತ್ತೆ. ಉದಾಹರಣೆಗೆ, ನಿಮ್ಮ ಹದಿವಯಸ್ಸಿನ ಮಗ ಫೋನಲ್ಲಿ ಜಾಸ್ತಿ ಟೈಂ ವೇಸ್ಟ್‌ ಮಾಡ್ತಾ ಸ್ಕೂಲ್‌ ಹೋಮ್‌ ವರ್ಕ್‌ ಮಾಡದೇ ಇದ್ರೆ ಇಂತಿಷ್ಟೇ ಟೈಂ ಫೋನ್‌ ಉಪಯೋಗಿಸಬೇಕು ಅನ್ನೋ ನಿಯಮ ಇಡಿ.

     ಬೈಬಲ್‌ ತತ್ವ: “ಮನುಷ್ಯನು ಏನು ಬಿತ್ತುತ್ತಿದ್ದಾನೊ ಅದನ್ನೇ ಕೊಯ್ಯುವನು.”—ಗಲಾತ್ಯ 6:7.

  •   ನಂಬಿಕೆ ಕಟ್ಟೋಕೆ ಅವ್ರಿಗೆ ಸಹಾಯ ಮಾಡಿ. ನಿಜ ಒಂದೇ ದಿನದಲ್ಲಿ ಇದು ಆಗೋ ಮಾತಲ್ಲ. ಹೋದ ನಂಬಿಕೆನಾ ಮತ್ತೆ ಸರಿಮಾಡಬಹುದು ಆದ್ರೆ ಅದಕ್ಕೆ ಸಮಯ ಬೇಕು. ಮಕ್ಕಳು ನಿಮ್ಮ ನಂಬಿಕೆನ ಮತ್ತೆ ಗಳಿಸಬಹುದು ಅಂತ ಹೇಳಿ. ಇಲ್ಲಾಂದ್ರೆ ನಂಬಿಕೆ ಗಳಿಸೋ ಪ್ರಯತ್ನನ ಅವ್ರು ಯಾವತ್ತೂ ಮಾಡೋದಿಲ್ಲ.

     ಬೈಬಲ್‌ ತತ್ವ: “ನಿಮ್ಮ ಮಕ್ಕಳು ಮನಗುಂದಿಹೋಗದಂತೆ ಅವರನ್ನು ಕೆಣಕುತ್ತಾ ಇರಬೇಡಿ.‏”—ಕೊಲೊಸ್ಸೆ 3:21.

a ಯೂ ಆ್ಯಂಡ್‌ ಯುವರ್‌ ಅಡೋಲೆಸೆಂಟ್‌ ಪುಸ್ತಕ.