ಮತ್ತಾಯ 24:1-51
24 ಯೇಸು ದೇವಾಲಯದಿಂದ ಹೋಗ್ತಿದ್ದಾಗ ಶಿಷ್ಯರು ಆತನ ಹತ್ರ ಬಂದು ದೇವಾಲಯದ ಕಟ್ಟಡಗಳನ್ನ ತೋರಿಸಿದ್ರು.
2 ಆಗ ಯೇಸು “ಇದನ್ನೆಲ್ಲ ನೋಡಿ ನಿಮಗೆ ಆಶ್ಚರ್ಯ ಆಗ್ತಿದ್ಯಾ? ಆದ್ರೆ ನಿಮಗೆ ನಿಜ ಹೇಳ್ತೀನಿ, ಕಲ್ಲಿನ ಮೇಲೆ ಕಲ್ಲು ನಿಲ್ಲದ ಹಾಗೆ ಇದನ್ನೆಲ್ಲ ಬೀಳಿಸ್ತಾರೆ”+ ಅಂದನು.
3 ಆಮೇಲೆ ಆತನು ಆಲೀವ್ ಗುಡ್ಡದ ಮೇಲೆ ಒಬ್ಬನೇ ಕೂತಿದ್ದಾಗ ಶಿಷ್ಯರು ಬಂದು “ಆ ವಿಷ್ಯಗಳೆಲ್ಲ ಯಾವಾಗ ನಡೆಯುತ್ತೆ? ನೀನು ಮತ್ತೆ ಬರೋ ಕಾಲಕ್ಕೆ*+ ಮತ್ತು ಈ ಲೋಕದ ಅಂತ್ಯಕಾಲಕ್ಕೆ ಸೂಚನೆ ಏನು? ನಮಗೆ ಹೇಳು” ಅಂದ್ರು.+
4 ಅದಕ್ಕೆ ಯೇಸು ಹೀಗೆ ಹೇಳಿದ “ಯಾರೂ ನಿಮ್ಮನ್ನ ದಾರಿತಪ್ಪಿಸದೇ ಇರೋ ತರ ನೋಡ್ಕೊಳ್ಳಿ.+
5 ಯಾಕಂದ್ರೆ ತುಂಬ ಜನ ನನ್ನ ಹೆಸ್ರಲ್ಲಿ ಬರ್ತಾರೆ. ‘ನಾನೇ ಕ್ರಿಸ್ತ’ ಅಂತ ಹೇಳಿ ಎಷ್ಟೋ ಜನ್ರನ್ನ ದಾರಿತಪ್ಪಿಸ್ತಾರೆ.+
6 ಯುದ್ಧ ನಡಿಯೋದನ್ನ, ಯುದ್ಧ ಆಗ್ತಾ ಇದೆ ಅನ್ನೋ ಸುದ್ದಿಯನ್ನ ನೀವು ಕೇಳ್ತೀರ. ಆಗ ಭಯಪಡಬೇಡಿ. ಯಾಕಂದ್ರೆ ಅವೆಲ್ಲ ಆಗಲೇಬೇಕು. ಆದ್ರೆ ಅದೇ ಅಂತ್ಯ ಅಲ್ಲ.+
7 ಜನ್ರ ಮೇಲೆ ಜನ್ರು ಆಕ್ರಮಣ ಮಾಡ್ತಾರೆ. ಒಂದು ದೇಶ ಇನ್ನೊಂದು ದೇಶದ ಮೇಲೆ ಯುದ್ಧಮಾಡುತ್ತೆ.+ ಒಂದರ ನಂತರ ಇನ್ನೊಂದು ಸ್ಥಳದಲ್ಲಿ ಆಹಾರದ ಕೊರತೆ ಇರುತ್ತೆ,+ ಭೂಕಂಪ ಆಗುತ್ತೆ.+
8 ಇವೆಲ್ಲ ಕಷ್ಟಕಾಲದ* ಆರಂಭ ಅಷ್ಟೇ.
9 ಆಗ ಜನ್ರು ನಿಮಗೆ ಚಿತ್ರಹಿಂಸೆ ಮಾಡಿ+ ಕೊಲ್ತಾರೆ.+ ನೀವು ನನ್ನ ಶಿಷ್ಯರಾಗಿರೋ ಕಾರಣ ಎಲ್ಲ ದೇಶದವರು ನಿಮ್ಮನ್ನ ದ್ವೇಷಿಸ್ತಾರೆ.+
10 ಅಷ್ಟೇ ಅಲ್ಲ ತುಂಬ ಜನ ದೇವರ ಮೇಲೆ ನಂಬಿಕೆ ಕಳ್ಕೊತಾರೆ. ಒಬ್ರಿಗೊಬ್ರು ಮೋಸ ಮಾಡ್ತಾರೆ, ದ್ವೇಷಿಸ್ತಾರೆ.
11 ಅನೇಕ ಸುಳ್ಳು ಪ್ರವಾದಿಗಳು ಹುಟ್ಟಿಕೊಳ್ತಾರೆ. ಅವರು ತುಂಬ ಜನ್ರನ್ನ ದಾರಿತಪ್ಪಿಸ್ತಾರೆ.+
12 ಕೆಟ್ಟತನ* ಹೆಚ್ಚಾಗೋದ್ರಿಂದ ತುಂಬ ಜನ್ರ ಪ್ರೀತಿ ತಣ್ಣಗಾಗುತ್ತೆ.
13 ಆದ್ರೆ ಕೊನೇ ತನಕ ತಾಳ್ಕೊಳ್ಳುವವನಿಗೆ ರಕ್ಷಣೆ ಸಿಗುತ್ತೆ.+
14 ದೇವರ ಆಳ್ವಿಕೆಯ* ಈ ಸಿಹಿಸುದ್ದಿ ಲೋಕದಲ್ಲಿ ಇರೋ ಎಲ್ಲ ದೇಶಗಳಿಗೆ ಸಾಕ್ಷಿಗಾಗಿ ಸಾರಲಾಗುತ್ತೆ.+ ಆಮೇಲೆ ಅಂತ್ಯ ಬರುತ್ತೆ.
15 ಪ್ರವಾದಿ ದಾನಿಯೇಲ ಹೇಳಿರೋ ತರ ಹಾಳುಮಾಡೋ ಅಸಹ್ಯ ವಸ್ತು ಪವಿತ್ರ ಸ್ಥಳದಲ್ಲಿ+ ನಿಂತಿರೋದನ್ನ ನೀವು ನೋಡ್ತೀರ. (ಓದುವವರು ಬುದ್ಧಿ ಉಪಯೋಗಿಸಲಿ)
16 ಅದನ್ನ ನೋಡಿದ ತಕ್ಷಣ ಯೂದಾಯದಲ್ಲಿ ಇರೋರು ಬೆಟ್ಟಗಳಿಗೆ ಓಡಿಹೋಗಬೇಕು.+
17 ಮನೆ ಮೇಲೆ ಇರುವವನು ಮನೆ ಒಳಗಿರೋ ವಸ್ತುಗಳನ್ನ ತಗೊಳ್ಳೋಕೆ ಕೆಳಗೆ ಇಳಿಬಾರದು.
18 ಹೊಲದಲ್ಲಿ ಇರುವವನು ಮೇಲಂಗಿ ತಗೊಳ್ಳೋಕೆ ಮನೆಗೆ ವಾಪಸ್ ಹೋಗಬಾರದು.
19 ಆಗ ಗರ್ಭಿಣಿಯರಿಗೆ, ಮೊಲೆಕೂಸು ಇರೋರಿಗೆ ತುಂಬ ಕಷ್ಟ ಆಗುತ್ತೆ!
20 ನೀವು ಓಡಿಹೋಗಬೇಕಾದ ಸಮಯ ಚಳಿಗಾಲದಲ್ಲಿ ಅಥವಾ ಸಬ್ಬತ್ ದಿನದಲ್ಲಿ ಬರಬಾರದು ಅಂತ ಪ್ರಾರ್ಥನೆ ಮಾಡ್ತಾ ಇರಿ.
21 ಯಾಕಂದ್ರೆ ಆಗ ಮಹಾ ಸಂಕಟ ಇರುತ್ತೆ.+ ಲೋಕ ಆರಂಭ ಆದಾಗಿಂದ ಇವತ್ತಿನ ತನಕ ಅಂಥ ಕಷ್ಟ ಬಂದಿಲ್ಲ. ಇನ್ನು ಮುಂದೆನೂ ಬರಲ್ಲ.+
22 ದೇವರು ಆ ದಿನಗಳನ್ನ ಕಡಿಮೆ ಮಾಡದಿದ್ರೆ ಒಬ್ಬನೂ ಉಳಿಯಲ್ಲ. ಆದ್ರೆ ಆರಿಸ್ಕೊಂಡಿರೋ ಜನ್ರಿಗೋಸ್ಕರ ಆ ದಿನಗಳನ್ನ ಕಡಿಮೆ ಮಾಡ್ತಾನೆ.+
23 ಅಷ್ಟೇ ಅಲ್ಲ ಯಾರಾದ್ರೂ ನಿಮಗೆ ‘ಕ್ರಿಸ್ತ ಇಲ್ಲಿದ್ದಾನೆ,’+ ‘ಕ್ರಿಸ್ತ ಅಲ್ಲಿದ್ದಾನೆ’ ಅಂತ ಹೇಳಿದ್ರೆ ನಂಬಬೇಡಿ.+
24 ಯಾಕಂದ್ರೆ ಸುಳ್ಳು ಕ್ರಿಸ್ತರು, ಸುಳ್ಳು ಪ್ರವಾದಿಗಳು+ ಬಂದು ಬೇರೆಬೇರೆ ತರದ ದೊಡ್ಡದೊಡ್ಡ ಅದ್ಭುತಗಳನ್ನ ಮಾಡ್ತಾರೆ. ಹೀಗೆ ಮಾಡಿ ದೇವರು ಆರಿಸ್ಕೊಂಡಿರೋ ಜನ್ರನ್ನ ಸಹ ದಾರಿ ತಪ್ಪಿಸೋಕೆ ಪ್ರಯತ್ನಿಸ್ತಾರೆ.+
25 ನೋಡಿ, ನಾನು ನಿಮಗೆ ಮುಂಚೆನೇ ಹೇಳ್ತಾ ಇದ್ದೀನಿ.
26 ಜನ್ರು ನಿಮಗೆ ‘ಕ್ರಿಸ್ತ ಅರಣ್ಯದಲ್ಲಿ ಇದ್ದಾನೆ’ ಅಂತ ಹೇಳಿದ್ರೆ ಅಲ್ಲಿಗೆ ಹೋಗಬೇಡಿ. ‘ಕ್ರಿಸ್ತ ಒಳಗಿನ ಕೋಣೆಯಲ್ಲಿ ಇದ್ದಾನೆ’ ಅಂತ ಹೇಳಿದ್ರೆ ನಂಬಬೇಡಿ.+
27 ಪೂರ್ವದಿಂದ ಪಶ್ಚಿಮದ ತನಕ ಮಿಂಚು ಚಲಿಸೋ ಹಾಗೆ ಮನುಷ್ಯಕುಮಾರ ಮತ್ತೆ ಬರೋ ಕಾಲ ಇರುತ್ತೆ.+
28 ಹೆಣ ಎಲ್ಲಿರುತ್ತೋ ಹದ್ದುಗಳು ಅಲ್ಲೇ ಮುಗಿಬೀಳ್ತವೆ.+
29 ಆ ದಿನಗಳ ಕಷ್ಟ ಮುಗಿದ ತಕ್ಷಣ ಸೂರ್ಯ ಕತ್ತಲಾಗ್ತಾನೆ.+ ಚಂದ್ರ ಬೆಳಕು ಕೊಡಲ್ಲ, ನಕ್ಷತ್ರಗಳು ಆಕಾಶದಿಂದ ಬೀಳ್ತವೆ. ಆಕಾಶದ ಶಕ್ತಿಗಳು ನಡುಗ್ತವೆ.+
30 ಆಗ ಆಕಾಶದಲ್ಲಿ ಮನುಷ್ಯಕುಮಾರನ ಸೂಚನೆ ಕಾಣಿಸುತ್ತೆ. ಭೂಮಿಯ ಎಲ್ಲ ಕುಲದ ಜನ ಗೋಳಾಡ್ತಾ ಎದೆಬಡಿದ್ಕೊಳ್ತಾರೆ.+ ಮನುಷ್ಯಕುಮಾರ+ ಶಕ್ತಿ ಮತ್ತು ಮಹಾ ಅಧಿಕಾರದಿಂದ ಮೋಡಗಳ ಮೇಲೆ ಬರೋದನ್ನ ಅವರು ನೋಡ್ತಾರೆ.+
31 ಆಗ ತುತ್ತೂರಿ ಶಬ್ದ ಜೋರಾಗಿ ಕೇಳಿಸುತ್ತೆ. ಆತನು ತನ್ನ ದೂತರನ್ನ ಕಳಿಸ್ತಾನೆ. ಈ ದೂತರು ಮನುಷ್ಯಕುಮಾರ ಆರಿಸ್ಕೊಂಡವ್ರನ್ನ ಆಕಾಶದ ಒಂದು ಮೂಲೆಯಿಂದ ಇನ್ನೊಂದು ಮೂಲೆ ತನಕ ನಾಲ್ಕೂ ದಿಕ್ಕುಗಳಿಂದ ಒಟ್ಟುಗೂಡಿಸ್ತಾರೆ.+
32 ಅಂಜೂರ ಮರದಿಂದ ಪಾಠ ಕಲಿರಿ. ಆ ಮರದ ಕೊಂಬೆ ಚಿಗುರಿ ಎಲೆಬಿಡುವಾಗ ಬೇಸಿಗೆ ಶುರುವಾಯ್ತು ಅಂತ ಅರ್ಥಮಾಡ್ಕೊಳ್ತೀರಲ್ಲ.+
33 ಅದೇ ತರ ಈ ಎಲ್ಲ ವಿಷ್ಯ ನಡೆಯೋದನ್ನ ನೀವು ನೋಡುವಾಗ ಆತನು ಬಾಗಿಲ ಹತ್ರಾನೇ ಇದ್ದಾನೆ ಅಂತ ತಿಳ್ಕೊಳ್ಳಿ.+
34 ಈ ಎಲ್ಲ ವಿಷ್ಯ ನಡೆಯೋ ತನಕ ಈ ಪೀಳಿಗೆ ಅಳಿದು ಹೋಗಲ್ಲ ಅಂತ ನಿಮಗೆ ನಿಜ ಹೇಳ್ತೀನಿ.
35 ಆಕಾಶ ಭೂಮಿ ನಾಶ ಆಗುತ್ತೆ. ಆದ್ರೆ ನನ್ನ ಮಾತುಗಳು ಯಾವತ್ತೂ ನಾಶ ಆಗಲ್ಲ.+
36 ಆದ್ರೆ ಆ ದಿನ ಮತ್ತು ಸಮಯ ಯಾವಾಗ ಬರುತ್ತೆ ಅಂತ ಯಾರಿಗೂ ಗೊತ್ತಿಲ್ಲ.+ ತಂದೆಗೆ ಮಾತ್ರ ಗೊತ್ತು. ಸ್ವರ್ಗದಲ್ಲಿರೋ ದೇವದೂತರಿಗೂ ಗೊತ್ತಿಲ್ಲ, ಮಗನಿಗೂ ಗೊತ್ತಿಲ್ಲ.+
37 ನೋಹನ ದಿನಗಳು ಹೇಗಿದ್ದವೋ+ ಅದೇ ತರ ಮನುಷ್ಯಕುಮಾರ ಮತ್ತೆ ಬರೋ ಕಾಲ ಇರುತ್ತೆ.+
38 ಜಲಪ್ರಳಯಕ್ಕೆ ಮುಂಚಿನ ದಿನಗಳಲ್ಲಿ ಜನ ತಿಂತಾ ಕುಡಿತಾ ಮದುವೆಮಾಡ್ಕೊಳ್ತಾ ಮದುವೆಮಾಡ್ಕೊಡ್ತಾ ಇದ್ರು. ನೋಹ ಹಡಗೊಳಗೆ ಹೋಗೋ ತನಕ ಅದನ್ನೇ ಮಾಡ್ತಿದ್ರು.+
39 ಪ್ರಳಯ ಬಂದು ಅವ್ರನ್ನೆಲ್ಲ ಕೊಚ್ಕೊಂಡು ಹೋಗೋ ತನಕ+ ಅವರು ತಲೆ ಕೆಡಿಸ್ಕೊಳ್ಳಲಿಲ್ಲ. ಮನುಷ್ಯಕುಮಾರ ಮತ್ತೆ ಬರೋ ಕಾಲ ಅದೇ ತರ ಇರುತ್ತೆ.
40 ಆಗ ಇಬ್ರು ಪುರುಷರು ಹೊಲದಲ್ಲಿ ಇರ್ತಾರೆ. ದೇವರು ಒಬ್ಬನನ್ನ ಆರಿಸ್ಕೊಳ್ತಾನೆ, ಇನ್ನೊಬ್ಬನನ್ನ ಬಿಟ್ಟುಬಿಡ್ತಾನೆ.
41 ಇಬ್ರು ಸ್ತ್ರೀಯರು ಕಲ್ಲಿನಲ್ಲಿ ಧಾನ್ಯ ಬೀಸ್ತಾ ಇರ್ತಾರೆ. ದೇವರು ಒಬ್ಬಳನ್ನ ಆರಿಸ್ಕೊಳ್ತಾನೆ. ಇನ್ನೊಬ್ಬಳನ್ನ ಬಿಟ್ಟುಬಿಡ್ತಾನೆ.+
42 ಹಾಗಾಗಿ ಎಚ್ಚರವಾಗೇ ಇರಿ. ಯಾಕಂದ್ರೆ ನಿಮ್ಮ ಒಡೆಯ ಯಾವ ದಿನ ಬರ್ತಾನೆ ಅಂತ ನಿಮಗೆ ಗೊತ್ತಿಲ್ಲ.+
43 ಆದ್ರೆ ಒಂದು ವಿಷ್ಯ ಮನಸ್ಸಲ್ಲಿಡಿ. ಕಳ್ಳ ಯಾವ ಹೊತ್ತಲ್ಲಿ ಬರ್ತಾನೆ ಅಂತ ಮನೆ ಯಜಮಾನನಿಗೆ ಗೊತ್ತಿದ್ರೆ+ ಅವನು ಎಚ್ಚರವಾಗಿ ಇರ್ತಾನೆ. ಮನೆಗೆ ಕನ್ನ ಹಾಕೋಕೆ ಅವನು ಬಿಡಲ್ಲ.+
44 ಹಾಗಾಗಿ ನೀವು ಸಹ ಸಿದ್ಧವಾಗಿರಿ.+ ಯಾಕಂದ್ರೆ ನೀವು ನೆನಸದ ಸಮಯದಲ್ಲಿ ಮನುಷ್ಯಕುಮಾರ ಬರ್ತಾನೆ.
45 ತನ್ನ ಮನೆಯವ್ರಿಗೆ ತಕ್ಕ ಸಮಯಕ್ಕೆ ಆಹಾರ ಕೊಡೋಕೆ ಯಜಮಾನ ಅವ್ರ ಮೇಲೆ ನೇಮಿಸಿದ ನಂಬಿಗಸ್ತ, ವಿವೇಕಿ ಆದ ಆಳು ನಿಜಕ್ಕೂ ಯಾರು?+
46 ಯಜಮಾನ ಬಂದಾಗ ಯಾವ ಆಳು ಕೊಟ್ಟ ಕೆಲಸ ಮಾಡ್ತಾ ಇರ್ತಾನೋ ಆ ಆಳು ಸಂತೋಷವಾಗಿ ಇರ್ತಾನೆ!+
47 ಯಜಮಾನ ಆ ಆಳಿಗೆ ತನ್ನ ಎಲ್ಲ ಆಸ್ತಿ ನೋಡ್ಕೊಳ್ಳೋಕೆ ಹೇಳ್ತಾನೆ ಅಂತ ನಾನು ನಿಮಗೆ ನಿಜ ಹೇಳ್ತೀನಿ.
48 ಆದ್ರೆ ಆ ಆಳು ಕೆಟ್ಟವನಾಗಿ ‘ಯಜಮಾನ ಬರೋಕೆ ತಡಮಾಡ್ತಾ ಇದ್ದಾನೆ’ ಅಂತ ಅಂದ್ಕೊಂಡು+
49 ತನ್ನ ಜೊತೆ ಇರೋ ಆಳುಗಳನ್ನ ಹೊಡೆದು ಕುಡುಕರ ಜೊತೆ ತಿಂತಾ ಕುಡಿತಾ ಇರೋದಾದ್ರೆ,
50 ಆ ಆಳು ನೆನಸದ ದಿನದಲ್ಲಿ, ಎದುರುನೋಡದ ಸಮಯದಲ್ಲಿ ಯಜಮಾನ ಬರ್ತಾನೆ.+
51 ಅವನಿಗೆ ಕಠಿಣ ಶಿಕ್ಷೆ ಕೊಡ್ತಾನೆ. ಕಪಟ ಜನ್ರನ್ನ ಎಸೆಯೋ ಜಾಗದಲ್ಲಿ ಅವನನ್ನ ಎಸಿತಾನೆ. ಅಲ್ಲಿ ಆ ಆಳು ಜೋರಾಗಿ ಅಳ್ತಾ ಗೋಳಾಡ್ತಾನೆ.+
ಪಾದಟಿಪ್ಪಣಿ
^ ಪದವಿವರಣೆ ನೋಡಿ
^ ಅಕ್ಷ. “ಹೆರಿಗೆ ನೋವು.”
^ ಅಕ್ಷ. “ನಿಯಮ ಉಲ್ಲಂಘನೆ.” ಅದು, ದೇವರ ನಿಯಮಗಳನ್ನ ಕಡೆಗಣಿಸೋದು.
^ ಅಥವಾ, “ರಾಜ್ಯದ.”