ದಾನಿಯೇಲ 2:1-49

  • ರಾಜ ನೆಬೂಕದ್ನೆಚ್ಚರನನ್ನ ನಿದ್ದೆ ಕೆಡಿಸಿದ ಕನಸು (1-4)

  • ಯಾವ ವಿವೇಕಿಗೂ ಆ ಕನಸಿನ ಅರ್ಥ ಹೇಳಕ್ಕಾಗಿಲ್ಲ (5-13)

  • ಸಹಾಯಕ್ಕಾಗಿ ದಾನಿಯೇಲ ದೇವರಲ್ಲಿ ಪ್ರಾರ್ಥಿಸಿದ (14-18)

  • ಗುಟ್ಟು ತಿಳಿಸಿದ್ದಕ್ಕೆ ದೇವರಿಗೆ ಧನ್ಯ​ವಾದ (19-23)

  • ದಾನಿಯೇಲ ರಾಜನಿಗೆ ಕನಸು ಹೇಳಿದ (24-35)

  • ಕನಸಿನ ಅರ್ಥ (36-45)

    • ದೇವರ ಸರ್ಕಾರ ಅನ್ನೋ ಬಂಡೆ ಮೂರ್ತಿ​ಯನ್ನ ಚೂರುಚೂರು ಮಾಡಿತು (44, 45)

  • ರಾಜ ದಾನಿಯೇಲನನ್ನ ಸನ್ಮಾನಿಸಿದ (46-49)

2  ತನ್ನ ಆಳ್ವಿಕೆಯ ಎರಡ್ನೇ ವರ್ಷದಲ್ಲಿ ರಾಜ ನೆಬೂಕದ್ನೆಚ್ಚರನಿಗೆ ತುಂಬ ಕನಸು ಬಿತ್ತು. ಆ ಕನಸುಗಳಿಂದಾಗಿ ಅವನಿಗೆ ಎಷ್ಟು ಚಿಂತೆ ಆಯ್ತು+ ಅಂದ್ರೆ ನಿದ್ದೆನೇ ಬರಲಿಲ್ಲ.  ಆಗ ರಾಜ ತನ್ನ ಕನಸುಗಳ ಬಗ್ಗೆ ಕೇಳೋಕೆ ಮಂತ್ರವಾದಿಗಳನ್ನ, ಜೋತಿಷ್ಯ ಹೇಳುವವ್ರನ್ನ, ಕಸ್ದೀಯರನ್ನ* ಕರೆಸಿದ. ಆಗ ಅವರು ರಾಜನ ಮುಂದೆ ಬಂದು ನಿಂತ್ರು.+  ರಾಜ ಅವ್ರಿಗೆ “ನನಗೆ ಒಂದು ಕನಸು ಬಿತ್ತು. ಅದ್ರಿಂದ ತಲೆ ಕೆಟ್ಟು ಹೋಗಿದೆ ಅದ್ರ ಅರ್ಥ ಏನಂತ ಹೇಳಿ” ಅಂದ.  ಆಗ ಕಸ್ದೀಯರು ರಾಜನಿಗೆ ಅರಾಮ್ಯರ* ಭಾಷೆಯಲ್ಲಿ+ “ರಾಜ, ಚಿರಂಜೀವಿಯಾಗಿರು. ನಿನ್ನ ಸೇವಕರಿಗೆ ಆ ಕನಸು ಹೇಳು. ಅದ್ರ ಅರ್ಥ ಹೇಳ್ತೀವಿ” ಅಂದ್ರು.  ರಾಜ ಕಸ್ದೀಯರಿಗೆ “ನೀವು ನನ್ನ ಕನಸನ್ನ, ಅದ್ರ ಅರ್ಥವನ್ನ ಹೇಳದಿದ್ರೆ ನಿಮ್ಮನ್ನ ತುಂಡುತುಂಡು ಮಾಡಿಬಿಡ್ತೀನಿ. ನಿಮ್ಮ ಮನೆಗಳನ್ನ ಸಾರ್ವಜನಿಕ ಶೌಚಾಲಯ* ಮಾಡ್ತೀನಿ. ಇದೇ ನನ್ನ ಕೊನೆ ನಿರ್ಧಾರ.  ನನ್ನ ಕನಸನ್ನ, ಅದ್ರ ಅರ್ಥವನ್ನ ಹೇಳಿದ್ರೆ ನಿಮಗೆ ಉಡುಗೊರೆ, ಬಹುಮಾನ ಕೊಡ್ತೀನಿ. ವಿಶೇಷ ಸನ್ಮಾನ ಮಾಡ್ತೀನಿ.+ ಈಗ ನನ್ನ ಕನಸನ್ನ, ಅದ್ರ ಅರ್ಥವನ್ನ ಹೇಳಿ” ಅಂದ.  ಅವರು ಎರಡ್ನೇ ಸಲ ರಾಜನಿಗೆ “ರಾಜ ತನ್ನ ಸೇವಕರಿಗೆ ಆ ಕನಸು ಏನಂತ ಹೇಳು. ನಾವು ಅದ್ರ ಅರ್ಥ ಹೇಳ್ತೀವಿ” ಅಂದ್ರು.  ಆಗ ರಾಜ “ನೀವು ಬೇಕು ಬೇಕಂತ ಸಮಯ ಹಾಳು ಮಾಡ್ತಾ ಇದ್ದೀರ ಅಂತ ನಂಗೊತ್ತು. ನನ್ನ ಕೊನೆ ನಿರ್ಧಾರ ಏನಂತ ನಿಮಗೆ ಗೊತ್ತು.  ಆ ಕನಸು ಏನಂತ ಹೇಳದಿದ್ರೆ ನಿಮ್ಮೆಲ್ರಿಗೂ ಕಠಿಣ ಶಿಕ್ಷೆ ಸಿಗುತ್ತೆ. ನಾನು ಮನಸ್ಸು ಬದಲಾಯಿಸ್ಕೊಳ್ತೀನಿ ಅಂದ್ಕೊಂಡು ನನಗೆ ಸುಳ್ಳು ಹೇಳಿ ಮೋಸ ಮಾಡಬೇಕಂತ ಇದ್ದೀರಾ? ಮೊದ್ಲು ನನ್ನ ಕನಸು ಹೇಳಿ, ಆಗ ಅದ್ರ ಅರ್ಥ ಹೇಳೋಕೆ ನಿಮ್ಮಿಂದ ಆಗುತ್ತಾ ಇಲ್ವಾ ಅಂತ ನಂಗೊತ್ತಾಗುತ್ತೆ” ಅಂದ. 10  ಕಸ್ದೀಯರು ರಾಜನಿಗೆ “ರಾಜ ಕೇಳ್ತಿರೋ ವಿಷ್ಯ ಮಾಡೋಕೆ ಭೂಮಿ ಮೇಲಿರೋ ಯಾರಿಗೂ ಆಗಲ್ಲ. ಇಲ್ಲಿ ತನಕ ಯಾವ ದೊಡ್ಡ ರಾಜನಾಗಲಿ, ರಾಜ್ಯಪಾಲನಾಗಲಿ ಮಂತ್ರವಾದಿಯಿಂದ ಅಥವಾ ಕಸ್ದೀಯನಿಂದ ಇಂಥ ವಿಷ್ಯ ಕೇಳ್ಕೊಂಡಿಲ್ಲ. 11  ರಾಜ ಕೇಳ್ತಿರೋ ವಿಷ್ಯ ತುಂಬ ಕಷ್ಟ. ಮನುಷ್ಯರ ಮಧ್ಯ ವಾಸಿಸದ ದೇವರುಗಳೇ ಹೊರತು ಬೇರೆ ಯಾರೂ ಇದನ್ನ ಹೇಳೋಕೆ ಆಗಲ್ಲ” ಅಂದ್ರು. 12  ಇದನ್ನ ಕೇಳಿ ರಾಜನ ಕೋಪ ನೆತ್ತಿಗೇರಿತು. ಹಾಗಾಗಿ ಅವನು ಬಾಬೆಲಿನ ವಿವೇಕಿಗಳನ್ನೆಲ್ಲ ನಾಶ ಮಾಡೋಕೆ ಹೇಳಿದ.+ 13  ಈ ಆಜ್ಞೆ ಪ್ರಕಾರ, ವಿವೇಕಿಗಳನ್ನೆಲ್ಲ ಕೊಲ್ಲೋಕೆ ಹೊರಟಾಗ ದಾನಿಯೇಲನನ್ನ, ಅವನ ಸ್ನೇಹಿತರನ್ನ ಸಹ ಕೊಲ್ಲೋಕೆ ಹುಡುಕಿದ್ರು. 14  ಆಗ ದಾನಿಯೇಲ ವಿವೇಚನೆಯಿಂದ ತುಂಬ ಜಾಗರೂಕತೆಯಿಂದ ರಾಜನ ಅಂಗರಕ್ಷಕರ ಮುಖ್ಯಸ್ಥನಾಗಿದ್ದ ಅರ್ಯೋಕನ ಜೊತೆ ಮಾತಾಡಿದ. ಈ ಅರ್ಯೋಕ ಬಾಬೆಲಿನ ವಿವೇಕಿಗಳನ್ನ ಕೊಲ್ಲೋಕೆ ಹೊರಟ ವ್ಯಕ್ತಿ. 15  ದಾನಿಯೇಲ ರಾಜನ ಅಧಿಕಾರಿಯಾಗಿದ್ದ ಅರ್ಯೋಕನನ್ನ “ರಾಜ ಯಾಕೆ ಇಂಥ ಆಜ್ಞೆ ಕೊಟ್ಟಿದ್ದಾನೆ?” ಅಂತ ಕೇಳಿದ. ಆಗ ಅರ್ಯೋಕ ನಡೆದ ವಿಷ್ಯವನ್ನ ದಾನಿಯೇಲನಿಗೆ ಹೇಳಿದ.+ 16  ಆಗ ದಾನಿಯೇಲ ರಾಜನ ಹತ್ರ ಹೋಗಿ ಕನಸಿನ ಅರ್ಥ ಹೇಳೋಕೆ ಸ್ವಲ್ಪ ಸಮಯ ಕೊಡು ಅಂತ ಕೇಳಿದ. 17  ಆಮೇಲೆ ದಾನಿಯೇಲ ಮನೆಗೆ ಹೋಗಿ ನಡೆದ ವಿಷ್ಯವನ್ನ ತನ್ನ ಸ್ನೇಹಿತರಾದ ಹನನ್ಯ, ಮೀಷಾಯೇಲ, ಅಜರ್ಯರಿಗೆ ಹೇಳಿದ. 18  ಸ್ವರ್ಗದ ದೇವರು ನಮಗೆ ಕರುಣೆ ತೋರಿಸಿ ಈ ಗುಟ್ಟನ್ನ ತಿಳಿಸಬೇಕು, ಬಾಬೆಲಿನ ಬೇರೆ ವಿವೇಕಿಗಳ ಜೊತೆ ನಾವು ನಾಶ ಆಗಬಾರದು ಅಂತ ಪ್ರಾರ್ಥನೆ ಮಾಡಿ ಅಂತ ದಾನಿಯೇಲ ಸ್ನೇಹಿತರನ್ನ ಕೇಳ್ಕೊಂಡ. 19  ದೇವರು ದಾನಿಯೇಲನಿಗೆ ರಾತ್ರಿ ಒಂದು ದರ್ಶನದಲ್ಲಿ ಆ ಗುಟ್ಟನ್ನ ಹೇಳಿದನು.+ ಹಾಗಾಗಿ ಸ್ವರ್ಗದ ದೇವರನ್ನ ಹೊಗಳ್ತಾ 20  ದಾನಿಯೇಲ ಹೀಗಂದ: “ದೇವರ ಹೆಸ್ರಿಗೆ ಶಾಶ್ವತವಾಗಿ ಗೌರವ ಸಿಗ್ಲಿ,ಯಾಕಂದ್ರೆ ಆತನಿಗೆ ತುಂಬ ವಿವೇಕ, ಬಲ ಇದೆ.+ 21  ಆತನು ಸಮಯಗಳನ್ನ, ಕಾಲಗಳನ್ನ ಬದಲಿಸ್ತಾನೆ,+ರಾಜರನ್ನ ಅಧಿಕಾರದಿಂದ ಬೀಳಿಸಿ ಬೇರೆ ರಾಜರನ್ನ ಅಧಿಕಾರಕ್ಕೆ ತರ್ತಾನೆ,+ವಿವೇಕಿಗಳಿಗೆ ವಿವೇಕವನ್ನ, ವಿವೇಚನಾಶಕ್ತಿ ಇರೋರಿಗೆ ಜ್ಞಾನ ಕೊಡ್ತಾನೆ.+ 22  ಆತನು ಆಳವಾದ ಸಂಗತಿಗಳನ್ನ, ರಹಸ್ಯವಾದ ವಿಷ್ಯಗಳನ್ನ ಹೇಳಿ ಕೊಡ್ತಾನೆ,+ಆತನಿಗೆ ಕತ್ತಲೆಯಲ್ಲಿ ಏನಿದೆ ಅಂತ ಗೊತ್ತು,+ಆತನ ಹತ್ರ ಬೆಳಕು ತುಂಬ ಇದೆ.+ 23  ನನ್ನ ಪೂರ್ವಜರ ದೇವರೇ, ನೀನು ನನಗೆ ವಿವೇಕ, ಬಲ ಕೊಟ್ಟೆ. ಹಾಗಾಗಿ ನಾನು ನಿನಗೆ ಧನ್ಯವಾದ ಹೇಳ್ತೀನಿ, ಹೊಗಳ್ತೀನಿ. ನಾವು ಕೇಳಿದ್ದನ್ನ ನಮಗೆ ತಿಳಿಸಿದೆ,ರಾಜನ ಚಿಂತೆ ಏನಂತ ನಮಗೆ ಗೊತ್ತಾಗೋ ಹಾಗೆ ಮಾಡಿದೆ.”+ 24  ಆಮೇಲೆ ದಾನಿಯೇಲ ಬಾಬೆಲಿನ ವಿವೇಕಿಗಳನ್ನ ಕೊಲ್ಲೋಕೆ ರಾಜ ಕಳಿಸಿದ ಅರ್ಯೋಕನ ಹತ್ರ ಹೋಗಿ+ ಹೀಗೆ ಹೇಳಿದ: “ಬಾಬೆಲಿನ ಯಾವ ವಿವೇಕಿಯನ್ನೂ ಕೊಲ್ಲಬೇಡ. ನನ್ನನ್ನ ರಾಜನ ಹತ್ರ ಕರ್ಕೊಂಡು ಹೋಗು. ನಾನು ರಾಜನಿಗೆ ಆ ಕನಸಿನ ಅರ್ಥ ಹೇಳ್ತೀನಿ.” 25  ಕೂಡಲೇ ಅರ್ಯೋಕ ದಾನಿಯೇಲನನ್ನ ರಾಜನ ಹತ್ರ ಕರ್ಕೊಂಡು ಹೋಗಿ “ಯೆಹೂದದಿಂದ ಹಿಡ್ಕೊಂಡು ಬಂದವ್ರಲ್ಲಿ ನನಗೆ ಒಬ್ಬ ಸಿಕ್ಕಿದ್ದಾನೆ.+ ಅವನು ರಾಜನ ಕನಸಿನ ಅರ್ಥ ಹೇಳ್ತಾನೆ” ಅಂದ. 26  ಬೇಲ್ತೆಶಚ್ಚರ+ ಅನ್ನೋ ಹೆಸ್ರಿದ್ದ ದಾನಿಯೇಲನಿಗೆ ರಾಜ “ನಾನು ನೋಡಿದ ಕನಸು, ಅದ್ರ ಅರ್ಥ ಏನಂತ ನೀನು ನಿಜವಾಗ್ಲೂ ಹೇಳ್ತಿಯಾ?” ಅಂತ ಕೇಳಿದ.+ 27  ಅದಕ್ಕೆ ದಾನಿಯೇಲ ಹೀಗೆ ಉತ್ತರಕೊಟ್ಟ: “ರಾಜ ಕೇಳಿದ ರಹಸ್ಯವಾದ ವಿಷ್ಯವನ್ನ ಹೇಳೋಕೆ ಯಾವ ವಿವೇಕಿಗಾಗಲಿ, ಮಾಟಗಾರನಿಗಾಗಲಿ, ಜ್ಯೋತಿಷಿಗಾಗಲಿ ಆಗಲ್ಲ.+ 28  ಆದ್ರೆ ರಹಸ್ಯ ಹೇಳೋಕೆ ಒಬ್ಬನಿದ್ದಾನೆ, ಆತನು ಸ್ವರ್ಗದಲ್ಲಿರೋ ದೇವರು.+ ಕಡೇ ದಿನಗಳಲ್ಲಿ ಆಗೋ ವಿಷ್ಯಗಳನ್ನ ಆತನು ರಾಜ ನೆಬೂಕದ್ನೆಚ್ಚರನಿಗೆ ಹೇಳಿದ್ದಾನೆ. ನೀನು ನಿದ್ದೆ ಮಾಡ್ತಿದ್ದಾಗ ನಿನಗೆ ಬಿದ್ದ ಕನಸು, ನೀನು ನೋಡಿದ ದರ್ಶನಗಳನ್ನ ಹೇಳ್ತೀನಿ. 29  ರಾಜ, ನೀನು ಮಂಚದ ಮೇಲೆ ಮಲಗಿದ್ದಾಗ ಮುಂದೆ ನಡಿಯೋ ವಿಷ್ಯಗಳ ಬಗ್ಗೆ ಕನಸು ಬಿತ್ತು. ರಹಸ್ಯ ತಿಳಿಸೋ ದೇವರು ಮುಂದೆ ಆಗೋದನ್ನ ನಿನಗೆ ಹೇಳಿದ್ದಾನೆ. 30  ಬೇರೆಯವರಿಗಿಂತ ನಾನು ತುಂಬ ವಿವೇಕಿ ಅಂತ ತೋರಿಸೋಕೆ ಈ ರಹಸ್ಯ ನನಗೆ ಹೇಳಲಿಲ್ಲ. ನಿನ್ನ ಕನಸಿನ ಅರ್ಥ ಏನಂತ ಗೊತ್ತಾಗೋಕೆ, ನೀನು ಮನಸ್ಸಲ್ಲಿ ಏನು ಯೋಚಿಸ್ತಾ ಇದ್ದೆ ಅಂತ ಗೊತ್ತಾಗೋಕೆ ಈ ಗುಟ್ಟನ್ನ ದೇವರು ನನಗೆ ಹೇಳಿದ್ದಾನೆ.+ 31  ರಾಜ, ನೀನು ಕನಸಲ್ಲಿ ಒಂದು ದೊಡ್ಡ ಮೂರ್ತಿ ನೋಡಿದೆ. ನಿನ್ನ ಮುಂದೆ ಇದ್ದ ಆ ಮೂರ್ತಿ ತುಂಬ ದೊಡ್ಡದಾಗಿತ್ತು, ಪಳಪಳ ಹೊಳಿತಿತ್ತು, ನೋಡೋಕೆ ಭಯಂಕರವಾಗಿತ್ತು. 32  ಆ ಮೂರ್ತಿಯ ತಲೆ ಅಪ್ಪಟ ಚಿನ್ನ,+ ಎದೆ, ಕೈಗಳು ಬೆಳ್ಳಿ,+ ಹೊಟ್ಟೆ, ತೊಡೆಗಳು ತಾಮ್ರ,+ 33  ಕಾಲುಗಳು ಕಬ್ಬಿಣ,+ ಪಾದಗಳು ಕಬ್ಬಿಣ ಮತ್ತು ಜೇಡಿಮಣ್ಣಿನ ಮಿಶ್ರಣ.+ 34  ನೀನು ಆ ಮೂರ್ತಿಯನ್ನ ನೋಡ್ತಾ ಇದ್ದಾಗ ಮನುಷ್ಯನ ಕೈಯಿಂದ ಕತ್ತರಿಸದ ಒಂದು ಕಲ್ಲು ತನ್ನಿಂದ ತಾನೇ ಬಂದು ಕಬ್ಬಿಣ ಮತ್ತು ಜೇಡಿಮಣ್ಣಿನ ಮಿಶ್ರಣವಾಗಿದ್ದ ಪಾದಕ್ಕೆ ಹೊಡೆದು, ಆ ಮೂರ್ತಿಯನ್ನ ನುಚ್ಚುನೂರು ಮಾಡ್ತು.+ 35  ಆಗ ಕಬ್ಬಿಣ, ಜೇಡಿಮಣ್ಣು, ತಾಮ್ರ, ಬೆಳ್ಳಿ, ಚಿನ್ನ ಎಲ್ಲನೂ ಪುಡಿಪುಡಿ ಆಯ್ತು. ಅವು ಬೇಸಿಗೆ ಕಾಲದಲ್ಲಿ ಕಣದ ಮೇಲೆ ಬಿದ್ದಿರೋ ಹೊಟ್ಟಿನ ತರ ಆಯ್ತು. ಗಾಳಿ ಅವುಗಳನ್ನ ಹೊಡ್ಕೊಂಡು ಹೋದಾಗ ಅವುಗಳ ಸುಳಿವು ಸಹ ಸಿಗಲಿಲ್ಲ. ಆದ್ರೆ ಆ ಮೂರ್ತಿಗೆ ಬಂದು ಹೊಡೆದ ಆ ಕಲ್ಲು ದೊಡ್ಡ ಬೆಟ್ಟ ಆಗಿ ಇಡೀ ಭೂಮಿ ತುಂಬ್ಕೊಂಡಿತು. 36  ಇದೇ ಆ ಕನಸು. ಈಗ ನಾವು ರಾಜನಿಗೆ ಕನಸಿನ ಅರ್ಥ ಹೇಳ್ತೀವಿ. 37  ರಾಜನೇ, ರಾಜಾಧಿರಾಜನೇ, ಸ್ವರ್ಗದ ದೇವರು ನಿನಗೆ ಸಾಮ್ರಾಜ್ಯ,+ ಶಕ್ತಿ, ವೈಭವ ಕೊಟ್ಟಿದ್ದಾನೆ. 38  ಆತನು ಎಲ್ಲ ಮನುಷ್ಯರನ್ನ ಅವರು ಎಲ್ಲೇ ಇರಲಿ ಎಲ್ರನ್ನ ನಿನ್ನ ಕೈಗೆ ಕೊಟ್ಟಿದ್ದಾನೆ. ಜೊತೆಗೆ ಭೂಮಿಯಲ್ಲಿರೋ ಕ್ರೂರ ಪ್ರಾಣಿಗಳ ಮೇಲೆ, ಪಕ್ಷಿಗಳ ಮೇಲೆ ಹೀಗೆ ಎಲ್ರ ಮೇಲೆ ನಿನ್ನನ್ನ ಅಧಿಕಾರಿಯಾಗಿ ಮಾಡಿದ್ದಾನೆ.+ ನೀನೇ ಆ ಚಿನ್ನದ ತಲೆ.+ 39  ಆದ್ರೆ ನಿನ್ನ ನಂತ್ರ ನಿನ್ನಷ್ಟು ಬಲವಿಲ್ಲದ ಮತ್ತೊಂದು ಸಾಮ್ರಾಜ್ಯ ಬರುತ್ತೆ,+ ಆಮೇಲೆ ಮೂರನೇ ಸಾಮ್ರಾಜ್ಯ ಬರುತ್ತೆ. ಅದು ತಾಮ್ರದ್ದು. ಅದು ಇಡೀ ಭೂಮಿ ಆಳುತ್ತೆ.+ 40  ನಾಲ್ಕನೇ ಸಾಮ್ರಾಜ್ಯ ಕಬ್ಬಿಣದಷ್ಟು ಗಟ್ಟಿ.+ ಕಬ್ಬಿಣ ಹೇಗೆ ಎಲ್ಲವನ್ನ ಜಜ್ಜಿ ಪುಡಿಪುಡಿ ಮಾಡುತ್ತೋ ಹಾಗೇ ಆ ಸಾಮ್ರಾಜ್ಯ ಇರುತ್ತೆ. ಹೌದು, ಆ ಸಾಮ್ರಾಜ್ಯ ಕಬ್ಬಿಣ ತರ ಈ ಎಲ್ಲ ಸಾಮ್ರಾಜ್ಯಗಳನ್ನ ಜಜ್ಜಿ ನುಚ್ಚುನೂರು ಮಾಡುತ್ತೆ.+ 41  ನೀನು ನೋಡಿದ ಹಾಗೆ ಪಾದ ಮತ್ತು ಬೆರಳುಗಳು ಕಬ್ಬಿಣ ಮತ್ತು ಜೇಡಿಮಣ್ಣಿನ ಮಿಶ್ರಣ ಆಗಿರೋದ್ರಿಂದ ಈ ಸಾಮ್ರಾಜ್ಯ ಎರಡು ಭಾಗ ಆಗುತ್ತೆ. ಆದ್ರೆ ನೀನು ನೋಡಿದ ಹಾಗೆ ಜೇಡಿಮಣ್ಣಿನ ಜೊತೆ ಕಬ್ಬಿಣ ಬೆರೆತಿರೋದ್ರಿಂದ ಈ ಸಾಮ್ರಾಜ್ಯದ ಒಂದು ಭಾಗ ಕಬ್ಬಿಣ ತರ ಗಟ್ಟಿಯಾಗಿರುತ್ತೆ. 42  ಪಾದ ಮತ್ತು ಬೆರಳುಗಳು ಕಬ್ಬಿಣ ಮತ್ತು ಜೇಡಿಮಣ್ಣಿನಿಂದ ಬೆರೆತಿರೋದ್ರಿಂದ ಈ ಸಾಮ್ರಾಜ್ಯದ ಒಂದು ಭಾಗ ಗಟ್ಟಿಯಾಗಿರುತ್ತೆ, ಇನ್ನೊಂದು ಭಾಗ ನಾಜೂಕು ಆಗಿರುತ್ತೆ. 43  ನೀನು ನೋಡಿದ ಹಾಗೆ ಕಬ್ಬಿಣ ಮೃದುವಾದ ಜೇಡಿಮಣ್ಣಿನ ಜೊತೆ ಬೆರೆತಿರೋದ್ರಿಂದ ಈ ಸಾಮ್ರಾಜ್ಯದ ಗಟ್ಟಿಯಾದ ಭಾಗ ಜನ್ರ ಜೊತೆ* ಬೆರೆತುಹೋಗುತ್ತೆ. ಆದ್ರೆ ಹೇಗೆ ಕಬ್ಬಿಣ ಮೃದುವಾದ ಜೇಡಿಮಣ್ಣಿನ ಜೊತೆ ಬೆರೆಯೋದಿಲ್ವೋ ಹಾಗೇ ಅವು ಒಂದಕ್ಕೊಂದು ಅಂಟ್ಕೊಳ್ಳಲ್ಲ. 44  ಆ ರಾಜರ ಕಾಲದಲ್ಲಿ ಸ್ವರ್ಗದ ದೇವರು ಒಂದು ಆಡಳಿತ* ತರ್ತಾನೆ.+ ಅದಕ್ಕೆ ನಾಶನೇ ಇಲ್ಲ.+ ಅದು ಬೇರೆ ಜನ್ರ ಕೈಗೂ ಹೋಗಲ್ಲ.+ ಅದು ಈ ಎಲ್ಲ ಸಾಮ್ರಾಜ್ಯಗಳನ್ನ ನಜ್ಜುಗುಜ್ಜು ಮಾಡಿ ನಾಶ ಮಾಡುತ್ತೆ.+ ಆ ಆಡಳಿತ ಸದಾಕಾಲ ಇರುತ್ತೆ.+ 45  ನೀನು ನೋಡಿದ ಹಾಗೇ ಮನುಷ್ಯ ಕೈಯಿಂದ ಕತ್ತರಿಸದಿದ್ದ ಒಂದು ಕಲ್ಲು ಬೆಟ್ಟದಿಂದ ಬಂದು ಕಬ್ಬಿಣ, ತಾಮ್ರ, ಜೇಡಿಮಣ್ಣು, ಬೆಳ್ಳಿ, ಚಿನ್ನವನ್ನ ಚೂರುಚೂರು ಮಾಡುತ್ತೆ.+ ಮಹಾನ್‌ ದೇವರು ಮುಂದೆ ಏನಾಗುತ್ತೆ ಅಂತ ರಾಜನಿಗೆ ಹೇಳಿದ್ದಾನೆ.+ ಈ ಕನಸು ಸತ್ಯ, ಇದ್ರ ಅರ್ಥವನ್ನ ನೀನು ನಂಬಬಹುದು.” 46  ಆಗ ರಾಜ ನೆಬೂಕದ್ನೆಚ್ಚರ ದಾನಿಯೇಲನ ಮುಂದೆ ನೆಲದ ತನಕ ಬಗ್ಗಿ ನಮಸ್ಕಾರ ಮಾಡಿ ಅವನನ್ನ ಗೌರವಿಸಿದ. ಅವನಿಗೆ ಒಂದು ಉಡುಗೊರೆ ಕೊಡೋಕೆ, ಅವನ ಮುಂದೆ ಒಂದು ಧೂಪ ಅರ್ಪಿಸೋಕೆ ಅಪ್ಪಣೆ ಕೊಟ್ಟ. 47  ರಾಜನು ದಾನಿಯೇಲನಿಗೆ “ನಿಜವಾಗ್ಲೂ ನಿನ್ನ ದೇವರು ಎಲ್ಲ ದೇವರುಗಳಿಗಿಂತ ತುಂಬ ದೊಡ್ಡ ದೇವರು, ರಾಜರ ಒಡೆಯ, ರಹಸ್ಯಗಳನ್ನ ಬಿಡಿಸಿ ಹೇಳುವವನು. ಹಾಗಾಗಿ ನಿನಗೆ ಈ ರಹಸ್ಯವನ್ನ ಹೇಳೋಕೆ ಆಯ್ತು” ಅಂದ.+ 48  ಆಮೇಲೆ ರಾಜನು ದಾನಿಯೇಲನಿಗೆ ರಾಜ್ಯದಲ್ಲಿ ದೊಡ್ಡ ಸ್ಥಾನ ಕೊಟ್ಟ, ತುಂಬ ಅಮೂಲ್ಯ ಉಡುಗೊರೆಗಳನ್ನ ಕೊಟ್ಟ. ಅವನನ್ನ ಬಾಬೆಲಿನ ಇಡೀ ಪ್ರಾಂತ್ಯದ* ಮೇಲೆ ಅಧಿಕಾರಿಯಾಗಿ ನೇಮಿಸಿದ.+ ಬಾಬೆಲಿನ ಎಲ್ಲ ವಿವೇಕಿಗಳ ಮೇಲೆ ಮುಖ್ಯಾಧಿಕಾರಿಯಾಗಿ ಮಾಡಿದ. 49  ದಾನಿಯೇಲನ ಬೇಡಿಕೆ ಮೇರೆಗೆ ರಾಜನು ಶದ್ರಕ್‌, ಮೇಶಕ್‌, ಅಬೇದ್‌ನೆಗೋರನ್ನ+ ಬಾಬೆಲಿನ ಪ್ರಾಂತ್ಯದ ಮೇಲೆ ಆಡಳಿತ ಅಧಿಕಾರಿಗಳಾಗಿ ನೇಮಿಸಿದ. ಆದ್ರೆ ದಾನಿಯೇಲ ರಾಜನ ಆಸ್ಥಾನದಲ್ಲೇ ಸೇವೆ ಮಾಡ್ತಾ ಇದ್ದ.

ಪಾದಟಿಪ್ಪಣಿ

ಅದು, ಕಣಿ ಹೇಳೋದ್ರಲ್ಲಿ, ಜ್ಯೋತಿಷದಲ್ಲಿ ನಿಪುಣರಾಗಿರೋ ಒಂದು ಗುಂಪು.
ಅಥವಾ “ಸಿರಿಯರ.”
ಬಹುಶಃ, “ತಿಪ್ಪೆ ಗುಂಡಿ, ಸಗಣಿಯ ಗುಡ್ಡೆ.”
ಅಥವಾ “ಮಾನವ ಸಂತತಿ ಜೊತೆ,” ಅದು, ಸಾಮಾನ್ಯ ಜನ್ರು.
ಅಥವಾ “ರಾಜ್ಯ.”
ಅಥವಾ “ಕೈಕೆಳಗಿದ್ದ ಜಿಲ್ಲೆಯ.”